BREAKING: ಭಾರತದ 5 ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿಸಿ ರಾಷ್ಟ್ರಪತಿ ಆದೇಶ

ಒಡಿಶಾ ರಾಜ್ಯಪಾಲ ರಘುಬರ ದಾಸ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಒಡಿಶಾದ ನೂತನ ರಾಜ್ಯಪಾಲರನ್ನಾಗಿ ಡಾ. ಹರಿಬಾಬು ಕಂಭಂಪತಿ ಅವರನ್ನು ನೇಮಕ ಮಾಡಿದ್ದಾರೆ. ಹಾಗೇ, ಕೇರಳ, ಮಿಜೋರಾಂ, ಮಣಿಪುರಕ್ಕೂ ಹೊಸ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ.


ಈ ಮೂಲಕ ರಾಜ್ಯಪಾಲರ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು 5 ರಾಜ್ಯಗಳ ರಾಜ್ಯಪಾಲರ ನೇಮಕದಲ್ಲಿ ಮಹತ್ವದ ಬದಲಾವಣೆ ಮಾಡಿದ್ದಾರೆ. ದ್ರೌಪದಿ ಮುರ್ಮು ಇಬ್ಬರು ಹೊಸ ರಾಜ್ಯಪಾಲರನ್ನು ನೇಮಿಸಿದ್ದು, ಇತರ ಮೂವರ ರಾಜ್ಯಗಳ ಬದಲಾವಣೆ ಮಾಡಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ. ಬಿಹಾರ, ಒಡಿಶಾ, ಮಿಜೋರಾಂ, ಕೇರಳ ಮತ್ತು ಮಣಿಪುರ ರಾಜ್ಯಗಳ ರಾಜ್ಯಪಾಲರನ್ನು ಇಂದು ರಾಷ್ಟ್ರಪತಿಗಳು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.


 

ಕೇರಳದ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಬಿಹಾರಕ್ಕೆ, ಅಜಯ್ ಕುಮಾರ್ ಭಲ್ಲಾ ಅವರನ್ನು ಮಣಿಪುರದ ಉಸ್ತುವಾರಿಯಾಗಿ ನೇಮಿಸಲಾಗಿದೆ

ಕೇಂದ್ರ ಸರ್ಕಾರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಮಣಿಪುರದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಒಡಿಶಾದ ನೂತನ ರಾಜ್ಯಪಾಲರನ್ನಾಗಿ ಡಾ. ಹರಿಬಾಬು ಕಂಭಂಪತಿ ಅವರನ್ನು ನೇಮಕ ಮಾಡಿದ್ದಾರೆ. 2021ರ ಜುಲೈ 19ರಿಂದ ಡಾ. ಹರಿಬಾಬು ಮಿಜೋರಾಂ ರಾಜ್ಯಪಾಲರಾಗಿದ್ದರು. ಮಿಜೋರಾಂ ಗವರ್ನರ್ ಆಗಿ ಇದೀಗ ವಿಜಯ್ ಕುಮಾರ್ ಸಿಂಗ್ ನೇಮಕಗೊಂಡಿದ್ದಾರೆ. ಕೇರಳ ರಾಜ್ಯಪಾಲರಾಗಿ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ನೇಮಕವಾಗಿದ್ದಾರೆ. ಇದುವರೆಗೆ ಬಿಹಾರ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಬದಲಾಗಿ ನೂತನ ರಾಜ್ಯಪಾಲರಾಗಿ ಮೊಹಮ್ಮದ್ ಆರೀಫ್ ಖಾನ್ ನೇಮಕಗೊಂಡಿದ್ದಾರೆ. ಮೊಹಮ್ಮದ್ ಆರೀಫ್ ಖಾನ್ ಇದುವರೆಗೆ ಕೇರಳ ಗವರ್ನರ್ ಆಗಿದ್ದರು.


ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಬಿಹಾರಕ್ಕೆ ವರ್ಗಾವಣೆ ಮಾಡಲಾಗಿದ್ದು, ಬಿಹಾರದ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರನ್ನು ಕಲಹ ಪೀಡಿತ ರಾಜ್ಯವಾದ ಮಣಿಪುರದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಮಾಜಿ ಸೇನಾ ಮುಖ್ಯಸ್ಥ ವಿಜಯ್ ಕುಮಾರ್ ಸಿಂಗ್ ಅವರು ಮಿಜೋರಾಂ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ರಾಷ್ಟ್ರಪತಿ ಭವನದ ಪ್ರಕಾರ, ಒಡಿಶಾ ರಾಜ್ಯಪಾಲ ರಘುಬರ್ ದಾಸ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ. ರಘುಬರ್ ದಾಸ್ ಬದಲಿಗೆ ಮಿಜೋರಾಂ ರಾಜ್ಯಪಾಲ ಹರಿಬಾಬು ಕಂಬಂಪತಿ ಅವರನ್ನು ಒಡಿಶಾದ ಹೊಸ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.

2019ರಲ್ಲಿ ಅಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕೇರಳ ರಾಜ್ಯಪಾಲರಾಗಿ ಖಾನ್ ಅವರನ್ನು ನೇಮಿಸಿದರು. ಅವರು ತ್ವರಿತ ತ್ರಿವಳಿ ತಲಾಖ್ ಅನ್ನು ನಿಷೇಧಿಸುವ ನರೇಂದ್ರ ಮೋದಿ ಸರ್ಕಾರದ ಕ್ರಮವನ್ನು ಬೆಂಬಲಿಸಿದ್ದರು. ಆರಿಫ್ ಮೊಹಮ್ಮದ್ ಖಾನ್ ಅವರು ಶಾ ಬಾನೋ ಪ್ರಕರಣದಲ್ಲಿ 1986ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಸಂಪುಟದಿಂದ ಹೊರನಡೆದಿದ್ದರು.
ಈ ನೇಮಕಾತಿಗಳು ತಮ್ಮ ತಮ್ಮ ಕಛೇರಿಗಳ ಉಸ್ತುವಾರಿಯನ್ನು ವಹಿಸಿಕೊಂಡ ದಿನಾಂಕಗಳಿಂದ ಜಾರಿಗೆ ಬರುತ್ತವೆ.