ಪುತ್ತೂರು: ಕಾಣಿಯೂರು; ಮಸೀದಿಯ ಸ್ವಲಾತ್‌ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭ ಮನೆಯಲ್ಲಿ ಇದ್ದ ಲಕ್ಷ ಮೌಲ್ಯದ ಚಿನ್ನಾಭರಣ ಕಳವು


ಪುತ್ತೂರು: ಬೆಳಂದೂರು ಗ್ರಾಮದ ಗುಂಡಿನಾರು ಎನ್ನುವಲ್ಲಿ ಮನೆಯೊಂದರಿಂದ ಚಿನ್ನಾಭರಣ ಕಳ್ಳತನ ನಡೆದ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಗುಂಡಿನಾರು ನಿವಾಸಿ ಮೊಹಮ್ಮದ್‌ ಆರಿಫ್‌ ಅವರು ಈ ಕುರಿತು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದು, ಫೆ.6ರಂದು ಸಂಜೆ ಸುಮಾರು 6.30 ಗಂಟೆಗೆ ತಂಗಿ ಆರೀಫಾಳ ಮನೆಗೆ ಬೀಗ ಹಾಕಿ ತಂಗಿ ಆರೀಫಾ, ತಂದೆ ಸುಲೈಮಾನ್‌, ತಾಯಿ ರೆಹಮತ್‌, ತಮ್ಮ ಆಸೀಫ್‌ನೊಂದಿಗೆ ಬೈತಡ್ಕ ಮಸೀದಿಯ ವಾರ್ಷಿಕ ಸ್ವಲಾತ್‌ ಕಾರ್ಯಕ್ರಮಕ್ಕೆ ತೆರಳಿದ್ದು, ರಾತ್ರಿ ಸ್ವಲಾತ್‌ ಕಾರ್ಯಕ್ರಮ ಮುಗಿಸಿ ತಮ್ಮ ಆಸೀಫ್‌ ಮನೆಯಲ್ಲಿ ಮಲಗಿದ್ದರು. 


ಫೆ. 7ರಂದು ಮನೆಗೆ ಬಂದಾಗ ಹಿಂಬಾಗಿಲು ಒಡೆದು ಮನೆಯೊಳಗೆ ಕಳ್ಳರು ಕಳವು ನಡೆಸಿದ ಕೃತ್ಯ ತಿಳಿದು ಬಂದಿತ್ತು.

ಕಪಾಟಿನೊಳಗಿದ್ದ ಸುಮಾರು 4 ಗ್ರಾಂ ತೂಕದ ಚಿನ್ನದ ಬ್ರಾಸ್‌ ಲೆಟ್‌ 1, ಸುಮಾರು 6 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೆಟ್‌ 1, ಸುಮಾರು 4 ಗ್ರಾಂ ತೂಕದ ಚಿನ್ನದ ಉಂಗುರ 1, ಸುಮಾರು 4 ಗ್ರಾಂ ತೂಕದ ಚಿನ್ನ ಇರುವ ಮುತ್ತಿನ ಸರ 1, ಸುಮಾರು 8 ಗ್ರಾಂ ತೂಕದ ಚಿನ್ನದ ಸರ 1, ಹೀಗೆ ಒಟ್ಟು 1.43 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದು ಕಂಡುಬಂದಿದೆ. ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.