ಅಕ್ರಮ-ಸಕ್ರಮ ಕಡತ ವಿಲೇವಾರಿ ರಾಜ್ಯದ ಒಂದೆರಡು ಕಡೆ ಹೊರತುಪಡಿಸಿ ಬೇರೆಲ್ಲೂ ನಡೆಯುತ್ತಿಲ್ಲ. ಪುತ್ತೂರಿನ ಹೊರತಾಗಿ ಕರಾವಳಿಯ ಯಾವ ವಿಧಾನಸಭಾ ಕ್ಷೇತ್ರದಲ್ಲೂ ಇದುವರೆಗೆ ಒಂದೇ ಒಂದು ಕಡತ ವಿಲೇವಾರಿ ಮಾಡಲಾಗಿಲ್ಲ. ಲಂಚ ಕೊಡಲು ಸಾಧ್ಯವಾಗದ ಕಾರಣದಿಂದಾಗಿ ಬಡವರ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ. ತಾಲ್ಲೂಕು ಕಚೇರಿಯಲ್ಲಿ ದೂಳು ಹಿಡಿಯುತ್ತಿದ್ದ ಅಕ್ರಮ- ಸಕ್ರಮ ಕಡತಗಳನ್ನು ಪರಿಶೀಲನೆ ಮಾಡಿ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕೆಲಸದ ಬಗ್ಗೆ ಜನರಲ್ಲಿ ಕೃತಜ್ಞತಾ ಭಾವ ಇರಬೇಕು ಎಂದು ಅವರು ಹೇಳಿದರು.
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ಅಕ್ರಮ ಸಕ್ರಮ ಕಡತ ವಿಲೇವಾರಿಯಲ್ಲಿ ಸುಮಾರು 180 ಎಕರೆ ಭೂಮಿಯನ್ನು ವಾರಸುದಾರರಿಗೆ ನೀಡಲಾಗಿದೆ ಎಂದರು.
ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿದರು.
ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ರೂಪರೇಖಾ ಆಳ್ವ, ರಾಮಣ್ಣ ಪಿಲಿಂಜ ಭಾಗವಹಿಸಿದ್ದರು.
ಕಂದಾಯ ನಿರೀಕ್ಷಕ ಗೋಪಾಲ ಸ್ವಾಗತಿಸಿದರು. ಗ್ರಾಮಕರಣಿಕ ಉಮೇಶ್ ಕಾವಡಿ ಕಾರ್ಯಕ್ರಮ ನಿರೂಪಿಸಿದರು.
ಹಕ್ಕುಪತ್ರ ವಿತರಣೆ:
ಬೆಟ್ಟಂಪಾಡಿ, ಇರ್ದೆ, ಪಾಣಾಜೆ, ಬಲ್ನಾಡು, ಒಳಮೊಗ್ರು, ಕೆದಂಬಾಡಿ, ಕೆಯ್ಯೂರು, ಕೊಳ್ತಿಗೆ, ಆರ್ಯಾಪು, ನೆ.ಮುಡ್ನೂರು, ಪಡುವನ್ನೂರು, ಮಾಡ್ನೂರು, ಬಡಗನ್ನೂರು, ಶಾಂತಿಗೋಡು, ಸರ್ವೆ, ಮುಂಡೂರು, ನರಿಮೊಗ್ರು, ಪುತ್ತೂರು ಕಸಬಾ ಗ್ರಾಮಗಳ 234 ಮಂದಿಯ ಅಕ್ರಮ ಸಕ್ರಮ ಕಡತಗಳ ವಿಲೇವಾರಿ ಮಾಡಲಾಯಿತು. 121 ಮಂದಿ ಫಲಾನುಭವಿಗಳಿಗೆ 94ಸಿ ಮತ್ತು 94 ಸಿಸಿ ಹಕ್ಕು ಪತ್ರ ವಿತರಿಸಲಾಯಿತು.
ಯಾರಿಗೂ ದುಡ್ಡು ಕೊಡಬೇಡಿ: ಅಕ್ರಮ ಸಕ್ರಮ ಅಥವಾ 94ಸಿ ಹಕ್ಕು ಪತ್ರ ಪಡೆಯಲು ಯಾರಿಗೂ ಲಂಚ ಕೊಡಬೇಡಿ ಎಂದು ನಾನು ಆರಂಭದಿಂದಲೇ ಹೇಳುತ್ತಾ ಬಂದಿದ್ದೇನೆ. ಆದರೂ ಕೆಲವರು ದುಡ್ಡು ಕೊಡುತ್ತಿದ್ದಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ನನಗೆ ಯಾರ ದುಡ್ಡೂ ಬೇಡ, ನನ್ನ ಹೆಸರು ಹೇಳಿ ಲಂಚ ತೆಗೆದುಕೊಳ್ಳುವುದನ್ನೂ ನಾನು ಸಹಿಸುವುದಿಲ್ಲ. ಅರ್ಜಿ ಹಾಕಿದವರು ನೇರವಾಗಿ ನನ್ನ ಕಚೇರಿಗೆ ಬಂದು ಮಾಹಿತಿ ನೀಡಿ ಎಂದು ಅಶೋಕ್ ರೈ ಹೇಳಿದರು.