11 ದಿನಗಳಿಂದ ನಾಪತ್ತೆಯಾಗಿದ್ದ ಫರಂಗಿಪೇಟೆ ವಿದ್ಯಾರ್ಥಿ ದಿಗಂತ್ ಪತ್ತೆ: ಸಿಕ್ಕಿದ್ದೆಲ್ಲಿ? ಇದಕ್ಕೂ ಮುನ್ನ ಏನೇನೆಲ್ಲ ನಡೆದಿತ್ತು? - MISSING DIGANT FOUND
ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಪತ್ತೆಯಾಗಿದ್ದು, ಮಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ ಎಂದು ದ.ಕ ಜಿಲ್ಲಾ ಎಸ್ಪಿ ಯತೀಶ್ ಅವರು ತಿಳಿಸಿದ್ದಾರೆ.
Published : Mar 8, 2025, 7:08 PM IST
ಮಂಗಳೂರು: ಹನ್ನೊಂದು ದಿನಗಳು ಕಳೆದು ಇಂದಿಗೆ ಹನ್ನೆರಡನೇ ದಿನ. ಫೆ.25ರಂದು ನಾಪತ್ತೆಯಾಗಿದ್ದ ಫರಂಗಿಪೇಟೆ ಕಿದೆಬೆಟ್ಟಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್ ಉಡುಪಿಯಲ್ಲಿ ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರೀಗ ಕರೆದುಕೊಂಡು ಬರುತ್ತಿದ್ದಾರೆ.
ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ದ.ಕ ಜಿಲ್ಲಾ ಎಸ್ಪಿ ಯತೀಶ್ ಅವರು ದಿಗಂತ್ ಉಡುಪಿಯಲ್ಲಿ ಪತ್ತೆಯಾಗಿದ್ದು, ಮಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ ಎಂದು ತಿಳಿಸಿದ್ದಾರೆ.
25ರಂದು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ದಿಗಂತ್ ಬಳಿಕ ಹಿಂದಿರುಗಿ ಬಂದಿರಲಿಲ್ಲ. ರೈಲ್ವೆ ಹಳಿಯಲ್ಲಿ ಆತನ ಚಪ್ಪಲಿಗಳು, ಮೊಬೈಲ್ ಪತ್ತೆಯಾಗಿ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿತ್ತು. ಫರಂಗಿಪೇಟೆಯಲ್ಲಿ ಪ್ರತಿಭಟನೆ ನಡೆದು ಪೊಲೀಸರ ತನಿಖೆ ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.
ಈತ ಮನೆಯಿಂದ ಹೋದವನು ಎಲ್ಲಿಗೆ ಹೋದ ಎಂಬ ಕುರಿತು ಸಮೀಪದಲ್ಲಿರುವ ಸಿಸಿ ಕ್ಯಾಮರಾ ಸಹಿತ ಸಂಬಂಧಿಕರು, ಸ್ನೇಹಿತರು ಹಾಗೂ ಪರಿಚಯಸ್ಥರನ್ನೆಲ್ಲಾ ಪೊಲೀಸರು ವಿಚಾರಣೆ ನಡೆಸಿದ್ದರು. ವಿದ್ಯಾರ್ಥಿ ನಾಪತ್ತೆ ಪ್ರಕರಣದ ಬಳಿಕ ಫರಂಗಿಪೇಟೆಯಲ್ಲಿ ಪೊಲೀಸರಿಗೆ ಒತ್ತಡ ಹೇರುವ ಸಲುವಾಗಿ ಪ್ರತಿಭಟನೆ ನಡೆಸಲಾಗಿತ್ತು. ಇದಾದ ಬಳಿಕ ತನಿಖೆ ಚುರುಕುಗೊಂಡಿತು.
ಬಂಟ್ವಾಳದಲ್ಲಿ ಕೆಲಸ ಮಾಡಿದ್ದ ಪ್ರಮುಖ ಪೊಲೀಸ್ ಅಧಿಕಾರಿಗಳೇ ತನಿಖಾ ತಂಡದಲ್ಲಿದ್ದು, ರಾತ್ರಿ ಹಗಲೆನ್ನದೇ ತನಿಖೆ ಕೈಗೊಂಡಿದ್ದರು. ಆತನ ಮೊಬೈಲ್ ಸಂದೇಶ, ಚಾಟ್ ಹಿಸ್ಟರಿಗಳನ್ನು ಕಲೆ ಹಾಕಿ ಇದೇನಾದರೂ ಪತ್ತೆ ಕಾರ್ಯಕ್ಕೆ ಸಹಾಯವಾಗುತ್ತಾ ಎಂಬುದನ್ನು ನೋಡಲಾಯಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರೇ ಖುದ್ದು ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.
ಮನೆಯಿಂದ ಹೊರಟು ನಾಪತ್ತೆ ಆದದ್ದೆಲ್ಲಿ?:ಫೆ.25ರಂದು ಸಂಜೆ 7 ಗಂಟೆಗೆ ಮನೆಯಿಂದ ದೇವಸ್ಥಾನಕ್ಕೆಂದು ಹೊರಟಿದ್ದ ದಿಗಂತ್, ರಾತ್ರಿ 8.30ರ ಸುಮಾರಿಗೆ ಆಂಜನೇಯ ವ್ಯಾಯಾಮ ಶಾಲೆ ಬಳಿ ಓಡಾಡಿದ್ದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಅಲ್ಲಿಂದ ಯಾವ ಕಡೆಗೆ ಹೋಗಿದ್ದಾನೆ ಎಂಬುದು ಸಮೀಪದ ಯಾವುದೇ ಸಿಸಿ ಟಿವಿಗಳಲ್ಲಿ ದಾಖಲಾಗಿಲ್ಲ. ಆತನ ಚಪ್ಪಲಿಗಳು ಹಾಗೂ ದೂರವಾಣಿ ರೈಲ್ವೆ ಹಳಿಯ ಬಳಿ ಸಿಕ್ಕಿದ್ದು, ಪತ್ತೆ ಕಾರ್ಯಕ್ಕೆ ತೊಡಕುಂಟಾಗಿತ್ತು. ರೈಲ್ವೆ ನಿಲ್ದಾಣ, ಹಳಿಯ ಆಸುಪಾಸಿನಲ್ಲಿ ಯಾವುದೇ ಕ್ಯಾಮರಾಗಳು ಇಲ್ಲದಿರುವ ಕಾರಣ, ತನಿಖೆ ಕ್ಲಿಷ್ಟವಾಗುತ್ತಿದೆ ಎಂದು ಹೇಳಲಾಯಿತು. ಚಪ್ಪಲಿಯಲ್ಲಿ ರಕ್ತದ ಕಲೆಗಳು ಕಂಡ ಕಾರಣ ಸ್ಥಳೀಯರಿಗೆ ಈತನನ್ನು ಅಪಹರಿಸಿರಬಹುದು ಎಂಬ ಸಂಶಯ ಹುಟ್ಟಿಕೊಂಡ ಬಳಿಕ ಫರಂಗಿಪೇಟೆ ಬಂದ್ ನಡೆಸುವವರೆಗೆ ಪ್ರಕರಣ ಬೆಳೆದಿತ್ತು. ಈತ ಹೋದ ಹೊತ್ತಿನಲ್ಲಿ ಕ್ವಾಲಿಸ್ ಕಾರೊಂದು ತಿರುಗಾಡಿದ್ದು ಕಂಡುಬಂದಿದ್ದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿತ್ತು.
ಹೇಬಿಯಸ್ ಕಾರ್ಪಸ್ ಅರ್ಜಿ:ದಿಗಂತ್ನನ್ನು ಹುಡುಕಿಕೊಡಲು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ. ಈಗಾಗಲೇ ಹೈಕೋರ್ಟ್ ದ್ವಿಸದಸ್ಯ ವಿಭಾಗೀಯ ಪೀಠಕ್ಕೆ ವಕೀಲರಾದ ಸಚಿನ್ ನಾಯಕ್, ಅಕ್ಷಯ್ ಆಳ್ವ ಮತ್ತು ಅಖಿಲೇಶ್ವರಿ ಈ ಅರ್ಜಿಯನ್ನು ಸಲ್ಲಿಸಿದ್ದರು.
ದಿಗಂತ್ ತಂದೆ ಪದ್ಮನಾಭ ಹೆಸರಲ್ಲಿ ಈ ಅರ್ಜಿ ಸಲ್ಲಿಸಲಾಗಿದ್ದು, ಫೆ.25ರಂದು ನಾಪತ್ತೆಯಾಗಿದ್ದ ದಿಗಂತ್ ಇದುವರೆಗೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕೂಲಂಕಷವಾಗಿ ತನಿಖೆ ನಡೆಸಿ ಆತನನ್ನು ಹುಡುಕಿಕೊಟ್ಟು ಹಾಜರುಪಡಿಸುವಂತೆ ಮನವಿಯಲ್ಲಿ ರಾಜ್ಯ ಸರಕಾರ, ಡಿಜಿಪಿ, ಎಸ್ಪಿ, ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅವರನ್ನು ಉದ್ದೇಶಿಸಲಾಗಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ 12ಕ್ಕೆ ಮುಂದೂಡಲಾಗಿತ್ತು