'ರಾಜ್ಯದಲ್ಲಿ ಪೊಲೀಸರು ಇಷ್ಟೊಂದು ಪ್ರಮಾಣದಲ್ಲಿ ಎಂಡಿಎಂಎ ವಶಪಡಿಸಿಕೊಂಡಿದ್ದು ಇದೇ ಮೊದಲು' ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.
'ದಕ್ಷಿಣ ಆಫ್ರಿಕಾದ ಬಾಂಬಾ ಫಾಂಟಾ ಅಲಿಯಾಸ್ ಅಡ್ನೋಯಿಸ್ ಜಾಬುಲಿಲೆ (31 ) ಹಾಗೂ ಒಲಿಜೊ ಇಯಾನ್ಸ್ ಅಲಿಯಾಸ್ ಅಬಿಗೇಲ್ ಅಡ್ನೋಯಿಸ್ (30) ಬಂಧಿತರು. ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದ ಅವರನ್ನು ಮಾರ್ಚ್ 14ರಂದು ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿನಗರದಲ್ಲಿ ವಶಕ್ಕೆ ಪಡೆದಿದ್ದೇವೆ' ಎಂದು ಅವರು ಮಾಹಿತಿ ನೀಡಿದರು.
'ಮಂಗಳೂರು ನಗರವನ್ನು ಮಾದಕ ವ್ಯಸನಮುಕ್ತಗೊಳಿಸುವ ಸಲುವಾಗಿ ಈ ದಂಧೆಯಲ್ಲಿ ತೊಡಗಿದ್ದವರ ಮೇಲೆ ಸದಾ ನಿಗಾ ಇಟ್ಟಿದ್ದರು. ನಗರದ ಪೂರ್ವ ಠಾಣೆಯ ವ್ಯಾಪ್ತಿಯ ಪಂಪ್ವೆಲ್ ಬಳಿಯ ವಸತಿಗೃಹವೊಂದರಲ್ಲಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಆರೋಪಿ ಹೈದರ್ ಆಲಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, ಆತನಿಂದ 15 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಆತ ನೀಡಿದ ಮಾಹಿತಿ ಆಧಾರದಲ್ಲಿ ಪ್ರಮುಖ ಡ್ರಗ್ ಪೆಡ್ಲರ್ ಆಗಿದ್ದ ನೈಜಿರಿಯಾ ಪ್ರಜೆ ಪೀಟರ್ ಐಕೆಡಿ ಬೆಲೊನೊವು ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಿ ಆತನಿಂದ 6.248 ಕೆ.ಜಿ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದೆವು. ಆತನಿಗೆ ಯಾರು ಮಾದಕ ಪದಾರ್ಥ ಪೂರೈಸುವವ ಜಾಡು ಹಿಡಿದು ಹೊರಟಾಗ ಬೆಂಗಳೂರು ನಗರಕ್ಕೆ ನವದೆಹಲಿಯಿಂದ ಹಾಗೂ ವಿದೇಶಿ ಮೂಲಗಳಿಂದ ನಿರಂತರ ಭಾರಿ ಪ್ರಮಾಣದಲ್ಲಿ ಮಾದಕ ಪದಾರ್ಥಗಳು ಪೂರೈಕೆಯಾಗುತ್ತಿರುವುದು ಗೊತ್ತಾಗಿತ್ತು' ಎಂದು ತಿಳಿಸಿದರು.

ವಶಪಡಿಸಿಕೊಂಡ ಎಂಡಿಎಂಎ ಜೊತೆ ಪೊಲೀಸರು
'ಪೀಟರ್ ಐಕೆಡಿ ಬೆಲೊನೊವುಗೆ ಬಾಂಬಾ ಫಾಂಟಾ ಹಾಗೂ ಒಲಿಜೊ ಇಯಾನ್ಸ್ ಇವರು ಮಾದಕ ಪದಾರ್ಥ ಪೂರೈಸುತ್ತಿದ್ದುದು ಗೊತ್ತಾಯಿತು. ಈ ಮಹಿಳೆಯರಿಬ್ಬರು ಆರು ತಿಂಗಳಲ್ಲಿ ಒಟ್ಟು 59 ಸಲ ನವದೆಹಲಿ ಹಾಗೂ ಬೆಂಗಳೂರು ನಡುವೆ ವಿಮಾನದಲ್ಲಿ ಪ್ರಯಾಣಿಸಿದ್ದರು. ಮಾರ್ಚ್ 14ರಂದು ಅವರು ಬೆಂಗಳೂರಿಗೆ ವಿಮಾನದಲ್ಲಿ ಬರುತ್ತಿದ್ದುದು ಗೊತ್ತಾಯಿತು. ವಿಮಾನ ನಿಲ್ದಾಣದಿಂದ ಹೊರಬಂದ ಅವರನ್ನು ಹಿಂಬಾಲಿಸಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹತ್ತಿರದ ನೀಲಾದ್ರಿ ನಗರಎಂಬಲ್ಲಿ ಅವರನ್ನು ವಶಕ್ಕೆ ಪಡೆದೆವು. ಅವರು ಎರಡು ಟ್ರಾಲಿ ಟ್ರಾವೆಲ್ ಬ್ಯಾಗ್ನಲ್ಲಿ ಸಾಗಿಸಿದ್ದ ಗಾಟ ಮಾಡಿಕೊಂಡಿದ್ದ 37.878 ಕೆ.ಜಿ ಎಂಡಿಎಂಎ, ನಾಲ್ಕು ಮೊಬೈಲ್ ಫೋನುಗಳು, ಎರಡು ಪಾಸ್ ಪೋರ್ಟ್, ₹18,460 ನಗದು ಮತ್ತಿತರ ಸೊತ್ತು ವಶಪಡಿಸಿಕೊಂಡಿದ್ದೇವೆ' ಎಂದು ಮಾಹಿತಿ ನೀಡಿದರು.
'ಆರೋಪಿಗಳು ರಾತ್ರಿ ವೇಳೆ ವಿಮಾನದಲ್ಲಿ ಪ್ರಯಾಣಿಸಿ ಬಾಡಿಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸಿ ಬೆಂಗಳೂರು ನಗರದ ಕೆ.ಆರ್.ಪುರ, ಹೊಸಕೋಟೆ ಮೊದಲಾದ ಕಡೆ, ಪಡ್ಲರ್ಗಳಾದ ನೈಜೀರಿಯನ್ ಪ್ರಜೆಗಳಿಗೆ ಎಂಡಿಎಂಎ ಪೂರೈಸುತ್ತಿದ್ದರು. 24 ಗಂಟೆಯ ಒಳಗೆ ಅವರು ನವದೆಹಲಿಗೆ ಮರಳುತ್ತಿದ್ದರು. ಅವರಿಬ್ಬರೂ ಬಳಸುತ್ತಿದ್ದ ಪಾಸ್ಪೋರ್ಟ್ ನಕಲಿ. ಅವರು ಯಾವೆಲ್ಲ ಸ್ಥಳೀಯ ಪೆಡ್ಲರ್ಗಳಿಗೆ ಮಾದಕ ಪದಾರ್ಥ ಪೂರೈಸುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಯತ್ನಿಸಿದ್ದೆವು. ಆದರೆ ಫಲಸಿಕ್ಕಿಲ್ಲ' ಎಂದರು.
'ಬಾಂಬಾ ಫಾಂಟಾ ಅಡ್ನೊಯಿಸ್ ಜಾಬುಲಿಲೆ ಎಂಬ ನಕಲಿ ಹೆಸರಿನಲ್ಲಿ ಪಾಸ್ಪೋರ್ಟ್ ಹೊಂದಿದ್ದಳು. ಆಕೆ ಬ್ಯುಸಿನೆಸ್ ವಿಸಾದಲ್ಲಿ ನಮ್ಮ ದೇಶಕ್ಕೆ ಬಂದಿದ್ದಳು. 2020ರಿಂದ ಫುಡ್ ಕಾರ್ಟ್ ವ್ಯವಹಾರವನ್ನೂ ನಡೆಸುತ್ತಿದ್ದರು. ನವದೆಹಲಿಯ ನಾವ್ಡಾದ ಲಕ್ಷ್ಮೀವಿಹಾರ್ನಲ್ಲಿ ವಾಸವಿದ್ದಳು. ಆಕೆ ಮೂಲತಃ ದಕ್ಷಿಣ ಆಫ್ರಿಕಾದ ಅಗಬೊವಿಲ್ಲೇ ಆಫ್ಇಕಾನ್ಸ್ ಐವಾಯಿರಿನೆಲ್ನವಳು. ಒಲಿಜೊ ಇಯಾನ್ಸ್ ನವದೆಹಲಿಯ ಮಾಳವೀಯ ನಗರದಲ್ಲಿ ವಾಸವಿದ್ದಳು. ಈಕೆ ಮೂಲತಃ ದಕ್ಷಿಣ ಆಫ್ರಿಕಾದ ಲಿಯು ಡಿ ನೈಸಾನ್ಸೆಯವಳು. ಈಕೆ ಮೆಡಿಕಲ್ ವಿಸಾದಲ್ಲಿ ಭಾರತಕ್ಕೆ 2016ರಲ್ಲಿ ಬಂದಿದ್ದು, ಬಳಿಕ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದಳು. ಇವರಿಬ್ಬರೂ ಮಾದಕ ವಸ್ತು ದಂಧೆಯ ಹಣದಿಂದ ಐಷಾರಾಮಿ ಜೀವನ ಸಾಗಿಸುತ್ತಿದ್ದರು' ಎಂದರು.
'ದೇಶದೊಳಗೆ ಸಂಚರಿಸುವ ವಿಮಾನದಲ್ಲಿ ಇವರಿಬ್ಬರು ಪ್ರಯಾಣ ಮಾಡುತ್ತಿದ್ದರು.ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ವೇಳೆ ಸಿಕ್ಕಿ ಬೀಳದೆ ಹೇಗೆ ತಪ್ಪಿಸಿಕೊಳ್ಳುತ್ತಿದ್ದರು ಎಂಬ ಬಗ್ಗೆ ಇನ್ನಷ್ಟೆ ತನಿಖೆಯಾಗಬೇಕಿದೆ. ಪ್ರತಿ ಸಲ ಬೆಂಗಳೂರಿಗೆ ಬಂದಾಗ ಎಷ್ಟು ಮಾದಕ ಪದಾರ್ಥ ತಂದಿದ್ದರು. ಅದನ್ನು ಯಾರಿಗೆ ಮಾರಾಟ ಮಾಡಿದ್ದರು ಎಂಬ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಿದ್ದೇವೆ' ಎಂದರು.
ಸಿಸಿಬಿ ಎಸಿಪಿ ಮನೋಜ್ ನಾಯ್ಕ್, ಇನ್ಸ್ಪೆಕ್ಟರ್ ರಪೀಕ್ ಕೆ.ಎಂ., ಪಿಎಸ್ಐ ಸುದೀಪ್ ಎಂ.ವಿ, ಶರಣಪ್ಪ ಭಂಡಾರಿ, ನರೇಂದ್ರ, ಎಎಸ್ಐ ಮೋಹನ್ ಕೆ.ವಿ., ರಾಮಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ (ಕಾನೂನು ಸುವ್ಯವಸ್ಥೆ) ಸಿದ್ಧಾರ್ಥ ಗೋಯಲ್, ಡಿಸಿಪಿ (ಅಪರಾಧ) ರವಿಶಂಕರ್, ಸಿಸಿಬಿ ಎಸಿಪಿ ಮನೋಜ್ ನಾಯ್ಕ್ ಭಾಗವಹಿಸಿದ್ದರು.